Friday, 12 September 2025

ಕವನ: ಗುಂಪುಗಾರಿಕೆ! -ರಚನೆ:ಡಾ.ಸಂಪತ್ ಬೆಟ್ಟಗೆರೆ

-ಕವನ-

ಗುಂಪುಗಾರಿಕೆ!

ಟೀಚರ್ಸ್ ಮತ್ತು ವಿದ್ಯಾರ್ಥಿಗಳ ಸಾಂದರ್ಭಿಕ ಚಿತ್ರ.(ಚಿತ್ರಕೃಪೆ:ಇಂಟರ್ನೆಟ್)

ಪಾದ್ರಿ ನಿಂತಿದ್ದರು 
ಅವರ ಸುತ್ತಲೂ ಕ್ರಿಶ್ಚಿಯನ್ನರು!
ಮೌಲ್ವಿ ನಿಂತಿದ್ದರು 
ಅವರ ಸುತ್ತಲೂ ಮುಸ್ಲಿಮರು!
ಸ್ವಾಮಿಗಳು ನಿಂತಿದ್ದರು 
ಅವರ ಸುತ್ತಲೂ ಹಿಂದೂ ಸಮುದಾಯದವರು! 
ಹೀಗೆ ಆಯಾ ಧರ್ಮದ ಗುರುಗಳು ಮತ್ತು ಜನರು
ಬೇರೆ ಬೇರೆ ಗುಂಪು ಗುಂಗಿನಲ್ಲಿ ಪ್ರತ್ಯೇಕರು! 

ನಮ್ಮ ಕನ್ನಡ ಗೌರ್ಮೇಂಟ್ ಶಾಲೆಯ ಶಿಕ್ಷಕರು 
ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿ ಹಂಚುತಿದ್ದರು! 
ಅವರ ಜಾತಿ, ಧರ್ಮ ಅದಾವುದೋ, ಮುಗುಳ್ನಕ್ಕರು
ನಂಗೂ ಒಂದ್ ಮೈಸೂರು ಪಾಕ ಕೈಗಿತ್ತು ನೋಡಿದರು! 
ಎಲ್ಲಾ ವಿದ್ಯಾರ್ಥಿಗಳು ಅಭೇದವಾಗಿ ಸಾಲಗಿ ನಿಂತರು
ಕೆಲವರು ಮಂಡಿಯೂರಿ ಕುಳಿತು ಫೋಟೋ ತೆಗೆದರು! 
ಸರ್ವ ಜನಾಂಗದ ಶಾಂತಿತೋಟ ನಾಡಗೀತೆ ನುಡಿದರು
ಎಲ್ಲರೂ ಹಾಗೇ ಜನಗಣಮನ ರಾಷ್ಟ್ರಗೀತೆ ಹಾಡಿದರು!

ಹೀಗೆ ಮಕ್ಕಳು ಶಿಕ್ಷಕರು
ಕನ್ನಡ ಶಾಲೆಯೇ ನಿಜವಾದ ಬಂಧು ಬಳಗದ ತವರು!
ಹಾಗೇ ಅಕ್ಕರೆ ಸಕ್ಕರೆಯ ಅಕ್ಷರ ಕಲಿತವರು 
ಮತ್ತೇಕೋ ಗೊತ್ತಿಲ್ಲ! ಪ್ರತ್ಯೇಕ ಗುಂಪಾಗಿ ಚದುರಿದರು! 

ನಮ್ಮ ಶಿಕ್ಷಕರು 
ಈಗ ನಿವೃತ್ತರು 
ಈ ಪ್ರಯುಕ್ತ ಅವರೀಗ ಸನ್ಮಾನಿತರು 
ಈ ಸನ್ಮಾನ ಮಾಡುತ್ತಿರುವರು
ಅವರದೇ ಜಾತಿ ಧರ್ಮವರು
ಅದೇ ಆ ನಮ್ಮ ಮೇಷ್ಟರು 
ನೋಡಿ ಜಾತಿಧರ್ಮದೊಳಗೇ ಪ್ರತ್ಯೇಕರಾಗಿದ್ದವರು
ಆದರೆ ಅವರು ವೃತ್ತಿ ಜೀವನದಲ್ಲಿ ಮಾತ್ರ ಜಾತ್ಯಾತೀತರು?
ಈಗ ನಿವೃತ್ತಿಯಲ್ಲಿ ಅವರ ಸಮುದಾಯದ ಶ್ರೇಷ್ಠ ಸಾಧಕರು 
ಅದಕ್ಕೀಗ ಅವರ ವಿದ್ಯಾರ್ಥಿಗಳಿಗೂ ತುಂಬಾ ಬೇಜಾರು! 
ಇಲ್ಲಿಯವರೆಗೆ ನಮ್ಮ ಗುರುಗಳು ನಮ್ಮವರಾಗಿದ್ದರು
ಈಗ ಮತ್ತೆ ಬೇರೆ ಹೋದರು! 
ಹೋದರೆ ಹೋಗಲಿ ನಾವು ಅವರ ಹಾಗೇ ಸಾಗುವವರು-
ಎಂದು ಅವರದೇ ಧರ್ಮ ಜಾತಿಯೊಳಗೆ ಸೇರಿಕೊಂಡರು!

ಹೀಗೆ 'ಮಾನವ ಜಾತಿ ತಾನೊಂದೆ ವಲಂ' ಪಂಪರು
'ವಿಶ್ವಮಾನವ' ಕುವೆಂಪುರವರು
'ಕುಲ ಕುಲವೆಂದು ಹೊಡೆದಾಡದಿರಿ' ಎಂದ ಕನಕದಾಸರು
'ಜ್ಯೋತಿ ಯಾವ ಜಾತಿಯಮ್ಮ..' ಹಾಡಿದ ಪುರಂದರು
ಪಾಠ, ಪಠ್ಯ, ಉಪನ್ಯಾಸದ ಪ್ರೋಗ್ರಾಂಗೆ ಮೀಸಲಾದರು
ನಮ್ಮ ಮೇಷ್ಟರು ಅದೇ ಎಷ್ಟು ಚಂದ ಬೋಧಿಸುತ್ತಿದ್ದರು! 
ಬಸವ, ಬುದ್ಧ, ವಿವೇಕಾನಂದರು, ಸಂತ ಕಬೀರರು
ಶರೀಫರು, ಗೋವಿಂದ ಭಟ್ಟರು,  ತೆರೆಸಾರು, ಕಲಾಂರು
ಬರೀ ಹೇಳಲಿಲ್ಲ ಬದುಕಿ ಕೂಡ ತೋರಿಸಿಕೊಟ್ಟಿದ್ದರು
ನಾವು ಮತ್ತೆ ಮೇಷ್ಟರಂತೆ ಗುಂಪು ಸೇರಿ ಚೂರಾದವರು! 

-ರಚನೆ:ಡಾ.ಸಂಪತ್ ಬೆಟ್ಟಗೆರೆ
 

No comments:

Post a Comment